Monday, January 18, 2016

                                            ಊರ್ಮಿಳಾ 
      

             ರಾಮಾಯಣ ಹಲವು ವೈರುಧ್ಯಗಳ  ಕೃತಿ . ಜಗತ್ತಿಗೆ ಜೀವನ ಮೌಲ್ಯಗಳನ್ನ ಕೊಡುಗೆ ನೀಡಿದ ರಾಮಾಯಣ ಇಂದಿಗೂ ಸರ್ವ ಕಾಲಿಕ ಶ್ರೇಷ್ಠ  ಕೃತಿ ಎನಿಸಿಕೊಂಡಿದೆ . ಹಾಗಾಗಿಯೇ ವಾಲ್ಮೀಕಿ ರಾಮಾಯಣ , ಆಧ್ಯಾತ್ಮ ರಾಮಾಯಣ, ಆನಂದ ರಾಮಾಯಣ ಹೀಗೆ ಅನೇಕ ಸ್ವರೂಪಗಳಲ್ಲಿ ರಾಮಾಯಣ ದಾಖಲಾಗಿದೆ . ಕೇವಲ ಹಿಂದುಗಳಷ್ಟೇ ಅಲ್ಲದೆ ಬೌದ್ಧರೂ ಜೈನರೂ ಈ ಶ್ರೇಷ್ಠ ಕೃತಿಯನ್ನು ತಮಗೆ ಇಷ್ಟವಾದ ರೀತಿಯಲ್ಲಿ ಬಳಸಿಕೊಂಡಿದ್ದಾರೆ , ಅಳವಡಿಸಿಕೊಂಡಿದ್ದಾರೆ . ಬಹುಶಃ ತೀರಾ ವಿಸ್ತೃತವಾಗಿ ಅಲ್ಲದೆ ಹೋದರೂ ಸಂಕ್ಷಿಪ್ತವಾಗಿ ದಶರಥ , ಮಂಥರೆ , ರಾಮ , ಲಕ್ಷ್ಮಣ , ಸೀತೆ , ಹನುಮ , ರಾವಣರನ್ನ ಒಳಗೊಂಡ ರಾಮಾಯಣದ ಕತೆ ಪ್ರತಿಯೊಬ್ಬರಿಗೂ ಗೊತ್ತಿರುವ ಪುರಾಣ ಕತೆ .   

              ನಿಜ , ರಾಮಾಯಣ ಅನೇಕ ಆದರ್ಶಗಳನ್ನ ಕಟ್ಟಿಕೊಟ್ಟ ಅಪರೂಪದ ಕೃತಿ . ರಾಮಾಯಣ ನಮಗೆ ಪಿತೃ  ವಾಕ್ಯ ಪರಿಪಾಲನೆಯ ಮೌಲ್ಯವನ್ನ ರಾಮನಿಂದ ನೀಡಿದೆ . ಲಕ್ಷ್ಮಣ ಇವತ್ತಿಗೂ ಭಾರತೀಯ ಜನಮಾನಸದಲ್ಲಿ ಭಾತೃ ಪ್ರೇಮಕ್ಕೆ  ಅಳಿಸಲಾಗದ ಉದಾಹರಣೆ . ಸತಿಧರ್ಮ ಎಂದರೇನೆಂದು ತಿಳಿಸಲು ಹಿರಿಯರು ನೆನೆಸಿಕೊಳ್ಳೋ ಮೊದಲ ಹೆಸರೇ ಸೀತಾ ಮಾತೆ . ಸ್ವಾಮಿ ಭಕ್ತಿಯ ಶ್ರೇಷ್ಠತೆಗೆ  ಹನುಮನಿಗಿಂತ ಬೇರೆ ನಿದರ್ಶನವೇ ಇಲ್ಲ . ಅಷ್ಟೇಕೆ ಇಡೀ ಪ್ರಸಂಗದುದ್ದಕ್ಕೂ ಖಳನಾಯಕನಾಗಿಯೇ ಕಾಡಿ ಕೊನೆಗಂಡ ರಾವಣನಲ್ಲೂ ಒಳ್ಳೆಯತನ ಹುಡುಕಿ ಮುಗಿಯುತ್ತದೆ ರಾಮಾಯಣ ಅನ್ನೋ ವಾಲ್ಮೀಕಿ ಕೃತಿ . 

        
        ಇಷ್ಟೆಲ್ಲಾ ಬರೆದ ವಾಲ್ಮೀಕಿ ಊರ್ಮಿಳೆಯನ್ನೇಕೆ ಮರೆತ  ಗೊತ್ತಿಲ್ಲ . ರಾಮಾಯಣದಲ್ಲಿ ಊರ್ಮಿಳೆಯ ಪ್ರವೇಶ ಯಾವಾಗ ಹೇಗಾಗುತ್ತೆ ನನಗಷ್ಟು ಸ್ಪಷ್ಟವಾಗಿ ಗೊತ್ತಿಲ್ಲ . ಆದರೆ ರಾಮನ ದೌರ್ಭಾಗ್ಯದ ನಿಮಿತ್ತ ಊರ್ಮಿಳೆ ತನ್ನ ಬದುಕನ್ನ ಕಳೆದುಕೊಂಡದ್ದು ಮಾತ್ರ ಅರ್ಥವಾಗಿದೆ . ಅಷ್ಟಕ್ಕೂ ಉರ್ಮಿಳೆಯ ಚಿತ್ರಣ ಸಿಕ್ಕಿದ್ದು ಮೂರ್ನಾಲ್ಕು ಬಾರಿ ಬಂದು ಬಂದು ಹೋಗೋ ಮೂರಕ್ಷರದ ಹೆಸರಾಗಿ ಅಷ್ಟೇ . ಆದರೂ ಇವತ್ತಿಗೂ ಊರ್ಮಿಳೆಯ ಪಾತ್ರ ರಾಮನಿಗಿಂತಲೂ , ಸೀತೆಗಿಂತಲೂ ಹೆಚ್ಚು ಆಳವಾಗಿ ಮನಸಲ್ಲಿದೆ . 

                  ಜಗತ್ತಿಗೆ ಸೀತೆ ಗೊತ್ತು , ಆದರೆ ಊರ್ಮಿಳೆ ? ಊಹುಂ ! ಲಕ್ಷ್ಮಣ ಗೊತ್ತು , ಅವನ ಹೆಂಡತಿ ? ನಮಗೆಲ್ಲ ರಾಮನ ಹಿಂದೆ ಕಾಡಿಗೆ ಹೋದ ಸೀತೆಯ ತ್ಯಾಗ ಅಗತ್ಯಕ್ಕಿಂತ ಜಾಸ್ತಿಯೇ ಗೊತ್ತು  . ಆದರೆ ಅರಮನೆಯಲ್ಲಿದ್ದೂ ವನಸುಮದಂತೆ ಬದುಕು ಕಳೆದ ಊರ್ಮಿಳೆ ಬಗ್ಗೆ ಏನೂ ಗೊತ್ತಿಲ್ಲ . ಅಷ್ಟಕ್ಕೂ ಊರ್ಮಿಳೆ ಯಾಕೆ ನಿರ್ಲಕ್ಷ್ಯಕ್ಕೊಳಗಾದಳು ? ಲಕ್ಷ್ಮಣನಿಲ್ಲದ ಊರ್ಮಿಳೆ ಬಗ್ಗೆ ಬರೆಯೂದೇನೆಂಬ ತಾತ್ಸಾರವೇ  ?  ಅಥವಾ ಸೀತಾ ರಾಮರ ವರ್ಣನೆಗೆ ಪದಗಳೆಲ್ಲಾ ಮೀಸಲಾದವೇ ? ಗೊತ್ತಿಲ್ಲ. ನನಗೇಕೋ ಅವಳು ವಾಲ್ಮೀಕಿಗೆ ಒಲಿಯದೆ ಉಳಿದ ಅಧ್ಯಾಯ ಅನ್ನಿಸುತ್ತಾಳೆ . ಮಾತು ಕೊಟ್ಟವನು ದಶರಥ , ಪಡೆದವಳು ಕೈಕೇಯಿ , ನಡೆಸಿಕೊಟ್ಟವ ರಾಮ . ನಡುವಲ್ಲಿ ನೊಂದು ನರಳಿದವಳು ಊರ್ಮಿಳೆ . ಹದಿನಾಲ್ಕು ವರ್ಷ ಅನ್ನೋದು ಸಣ್ಣ ಅವಧಿ ಏನಲ್ಲ . ಅದರೂ ಕೂಡ ಊರ್ಮಿಳೆಯ ದೌರ್ಭಗ್ಯಕ್ಕೊಂದೆರಡು ಪುಟ ಆ ಬೃಹತ್ ಗ್ರಂಥದಲ್ಲಿ ಸಿಗದೇ ಹೋಯಿತು . ಆ ವಿರಹಿಣಿಯ ದುರಂತ ಅಧ್ಯಾಯ ರಾಮಾಯಣದಲ್ಲಿ ದಾಖಗುವುದೇ ಇಲ್ಲ  . 

                    ನಿಜ , ಊರ್ಮಿಳೆಯದ್ದು ಲೋಕ ಮರೆತ ತ್ಯಾಗ . ಕೆಲ ವರ್ಷಗಳ ಹಿಂದೆ  'ಊರ್ಮಿಳೆ' ಕವಿತೆ ಬರೆದಾಗ ಹೆಚ್ಚಿನವರು  ಕೇಳಿದ್ದಿದೆ  'ಯಾರಿದು ಊರ್ಮಿಳೆ'  .  ಯಾಕೆಂದರೆ ಸೀತೆಗಾಗಿ ಮರುಗುವುದರಲ್ಲೇ  ಮುಳುಗಿದ್ದವರು  ನಾವು , ನಮಗೆ ಊರ್ಮಿಳೆಯ ಕಣ್ಣೀರು ಕಾಣಿಸಲಿಲ್ಲ .  ರಾಮನ ಹಿಂಬಾಲಿಸಿ ಲಕ್ಷ್ಮಣನ ಹೆಜ್ಜೆ ಸದ್ದು ಆಲಿಸುವುದರಲ್ಲೇ ಮಗ್ನರಾಗಿದ್ದ ನಮಗೆ ಅವನಿಲ್ಲದ ಅರಮನೆಯಲ್ಲಿಊರ್ಮಿಳೆ  ಬಿಕ್ಕುತ್ತಿದ್ದದ್ದು ಕೇಳಿಸಲೇ ಇಲ್ಲ . ಅದೇಕೋ ವಾಲ್ಮೀಕಿ ರಾಮಾಯಣ ಎಂದರೆ ರಾಮ ಸೀತೆ ಅಷ್ಟೇ ಎಂಬಂತೆ ಬರೆದ . ವನವಾಸದ ವರ್ಣನೆಯಲ್ಲಿ ಅವ  ಅಯೋಧ್ಯೆ ಮರೆತುಬಿಟ್ಟ .  ಹಾಗಾಗಿಯೇ ರಾಮನ ಜೊತೆ ಸಾಗಿದ ಸೀತೆ ನಮಗೆ ಲೋಕಮಾನ್ಯಳು  , ಅಣ್ಣನ ಸೇವೆ ಮಾಡಿದ ಲಕ್ಷ್ಮಣ ಸೋದರ ಪ್ರೇಮಕ್ಕೆ ಉದಾತ್ತ ಉದಾಹರಣೆ . ಆದರೆ ...... ಅವ  ಬಿಟ್ಟು ಬಂದ   '' ಊರ್ಮಿಳೆ '' ?  ಏನಾದಳೋ ನಮಗೆ ಬೇಕಿಲ್ಲ . ಹೌದು , ಯಾರೀ ಊರ್ಮಿಳೆ ????????

                                                                                        
                  

No comments:

Post a Comment